Sunday, November 11, 2007

ಕನ್ನಡಿಗರೇ.....

"ಕೈಲಾಸಂ ಜೋಕ್ಸು ಸಾಂಗ್ಸು" ಎಂಬ ಕಿರುಹೊತ್ತಿಗೆಯನ್ನು ಓದುತ್ತಿದ್ದೆ। ಕೈಲಾಸಂರವರ ಚುಟುಕಗಳು, ರಂಗ ಗೀತೆಗಳು, ಇತ್ಯಾದಿ ಎಲ್ಲವನ್ನೂ ಖ್ಯಾತ ಲೇಖಕರಾದ ಬಿ ಎಸ್ ಕೇಶವ ರಾವ್ ಅತಿ ಸುಂದರವಾಗಿ ಕ್ರೂಢೀಕರಿಸಿದ್ದಾರೆ। ಬಿ ಎಸ್ ಕೇಶವ ರಾವ್ ರವರ ಮತ್ತೊಂದು ಹಾಸ್ಯ ಭರಿತ ಹೊತ್ತಿಗೆ ನಾನು ಕೊಂಡು ಓದಿದ್ದು, "ಬೀಚಿ....ಬುಲ್ಲೆಟ್ಸು, ಬೊಂಬ್ಸ್ ಭಗವದ್ಗೀತೆ।" ಈ ಪುಸ್ತಕ ಬೀಚಿಯವರೊಂದಿಗಿನ ಕೇಶವ ರಾಯರ ಒಡನಾಟ ಬಿಂಬಿಸುತ್ತದೆ। ಮಾಸ್ಟರ್ ಹಿರಣ್ಣಯ್ಯನವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಕೇಶವರಾಯರೊಂದಿಗೆ ಮೊದಲ ಬಾರಿಗೆ ಭೆಟ್ಟಿಯಾದಾಗ ಅವರ ಬಗ್ಗೆ ಹೆಚ್ಚು ತಿಳಿಯುವ ಅವಕಾಶ ದೊರೆಯಿತು। ಅವರ ಮತ್ತೊಂದು ಪುಸ್ತಕ ಮೊನ್ನೆ ಸಪ್ನ ಪುಸ್ತಕ ಮಳಿಗೆಯಲ್ಲಿ (ಕೊಳ್ಳದಿದ್ದರೂ) ಕಣ್ಣು ಹಾಯಿಸಲು ಮರೆಯಲಿಲ್ಲ. ಪುಸ್ತಕದ ಹೆಸರು "ಕ್ರೀಂ ಆಫ಼್ ಕೈಲಾಸಂ" ಬಹುತೇಕ "ಕೈಲಾಸಂ ಜೋಕ್ಸು ಸಾಂಗ್ಸು" ನ ಹೊಸ ಪ್ರಕಟನೆಯಂತೆ ತೋರುತ್ತಿತ್ತು. "ಕೈಲಾಸಂ ಜೋಕ್ಸು ಸಾಂಗ್ಸು" ಪುಸ್ತಕದಲ್ಲಿ ಹೀಗೊಂದು ಸಂಗತಿ ಬರೆಯಲಾಗಿತ್ತು. ಕೈಲಾಸಂರವರು ಕೆಲ ಕಾಲ ಓದಿನ ಸಲುವಾಗಿ ವಿಲಾಯ್ತಿಯಲ್ಲಿದ್ದರು. ವಿಲಾಯ್ತಿಂದ ಭಾರತಕ್ಕೆ ಮರಳಿ ಬಂದಾಗ ಸಹಜವಾಗಿಯೇ ಎಲ್ಲರೂ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು. ಅದರಲ್ಲೊಬ್ಬರು, "ಕೈಲಾಸಂ, ಇಂಗ್ಲಾಂಡ್ ನಲ್ಲಿ ನಿಮಗೆ ಯಾರದರೂ ಭಾರತದವರು ಪರಿಚಯವಾದರೇ?....." ಆ ಪ್ರಶ್ನೆಗೆ ಸಕಾರತ್ಮಕ ಉತ್ತರ ದೊರೆತ ಕೂಡಲೇ, "ದಕ್ಷಿಣ ಭಾರತದವರೆಲ್ಲಾ ಒಂದೇ ಮುಖ ಲಕ್ಷಣ ಹೊಂದಿರುವುದರಿಂದ ಪ್ರತ್ಯೇಕವಾಗಿ ಕನ್ನಡಿಗರನ್ನು ನೀವು ಹೇಗೆ ಗುರುತಿಸುತ್ತಿದ್ದಿರಿ? " ಎಂಬ ಮುಂದಿನ ಪ್ರಶ್ನೆ ಎಸೆದರು. ಅದಕ್ಕೆ ಕೈಲಾಸಂ ನುಡಿದುದು "ವೆರಿ ಸಿಂಪಲ್ಲು.... ತೆಲುಗಿನಲ್ಲಿ ಮಾತಾಡಿಸಿದಾಗ ತೆಲುಗಿನಲ್ಲೇ ಉತ್ತರಿಸಿದರೆ, ಅವರು ತೆಲುಗರೆಂದು ಖಾತ್ರಿ. ಯಾವುದಾದರೂ ಭಾಷೆಯಲ್ಲಿ ಮಾತನಾಡಿಸಿದಾಗ ತಮಿಳಿನಲ್ಲಿ ಉತ್ತರಿಸಿದರೆ, ಅವರು ತಮಿಳರೆಂದು ಖಾತ್ರಿ, ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ಇಂಗ್ಲಿಷ್ ನಲ್ಲಿ ಉತ್ತರವಿತ್ತರೆ ಅವರು ಕನ್ನಡಿಗರು, ಕರ್ನಾಟಕದವರು" ನನ್ನ ಹಲವು ಗೆಳೆಯರನ್ನು ಗಮನಿಸಿದ್ದೇನೆ. ತೆಲುಗಿನವರೊಟ್ಟಿಗೆ "ಎಮ್ರಾ ಬಾಬು. ಬಾಗುನ್ನಾರ? ಏಮು ಚೆಸ್ತಾ ಉನ್ನಾರು?" ಎಂಬುದಾಗಿ ಹೇಳುತಿದ್ದವರು, ಅಲ್ಲೇ ಕಂಡ ತಮಿಳನನ್ನು "ಸೊಲ್ಲರಾ ಮಾಪ್ಳೇ..... ವೇಳೆ ಇರಕದಾ" ಎಂದೂ ಅಲ್ಲೆಲ್ಲೋ ಅವನಪಾಡಿಗೆ ಹೋಗುತ್ತಿರುವ ಉತ್ತರ ಭಾರತೀಯನನ್ನು ತಡವಿ, "ಅಬೇ ಆಜ್ ಜಾಕೆ ಆಯೇಂಗೆ... ಥೊಡ ಅರ್ಜೆಂಟ್ ಹೈ..... ಚಲೇಗಾ ಕ್ಯಾ?" ಕನ್ನಡ ಬಾರದವರಿಗೆ ಕನ್ನಡ ಹೇಳಿಕೊಟ್ಟು ಸಂಭಾಷಣೆ ನಡೆಸುವಲ್ಲಿ ನನಗೆ ಯಾವ ಪ್ರಮಾದವಾಗಲಿ, ಆಶ್ಚರ್ಯವಾಗಲಿ, ಅಸಹ್ಯಕರ ಬೆಳವಣಿಗೆಯಾಗಲಿ ಕಾಣದು. ಆದರೂ ಕನ್ನಡದ ಬಳಕೆ ವಿರಳ. ಕನ್ನಡದವರಾಗಿ ನಮ್ಮ ಭಾಷೆ ನಾವು ಬಳಸದಿದ್ದರೆ, ಬೆಳೆಸದಿದ್ದರೆ, ನಮ್ಮ ನೆರೆಹೊರೆ ರಾಜ್ಯದವರು ಕನ್ನಡವನ್ನು ಮೆಲ್ತರುತ್ತಾರಾ? ಎಷ್ಟೋ ಬಾರಿ ನಾನು ಅದೇ ತಪ್ಪನ್ನೇ ಮಾಡಿದ್ದೇನೆ. ಲಂಬೋದರ್ ಅಥವಾ ಪ್ರತಿಮಾ ಅಥವಾ ರತ್ನಾಕರ (ನನ್ನ ಪಯಣ ಕಾರ್ಯಸ್ಥರು) ಇವರುಗಳಲ್ಲಿ ಮಾತನಾಡುವಾಗ, "ಎಂಚಿನ ಮಾರ್ರ್‍ಎ... ಬಿಸಿ ಉಳ್ಳೆರಾ... ಒಂಜಿ ಟಿಕೆಟ್ ಆವುಡು. ಸ್ವಲ್ಪ ಹೆಲ್ಪ್ ಅಂಪುಲೇ...." ಎಂದೇ ಸಂಭಾಷಣೆ ನಡೆಯುತ್ತದೆ. ನನ್ನ ಮಾತೃಭಾಷೆ ಕನ್ನಡ. ಅವರುಗಳಿಗೂ ಸ್ವಚ್ಛ ಕನ್ನಡ ಆಡಲು ಬರುತ್ತದೆ. ಆದರೂ ಕನ್ನಡ ಬಳಸುವಿಕೆಯಲ್ಲಿ ಹಿಂಜರಿಕೆ. ಸುಂದರ ಸೌಮ್ಯ ಕೇಳಲು ಇಂಪಾದ ಕನ್ನಡವನ್ನು ಯಾರೂ ಬಳಸದಿದ್ದರೆ ಭಾಷೆ ಇದ್ದು ಎನು ಪ್ರಯೋಜನ. ಶೇಟು ಅಂಗಡಿಯಲ್ಲಿ ಹಿಂದಿಯಲ್ಲಿ ಮಾತಾಡುವುದು, ಶೆಟ್ಟಿ ಅಂಗಡಿಯಲ್ಲಿ ತೆಲುಗಿನಲ್ಲಿ, ಕಾಫಿ ಡೇ ನಲ್ಲಿ ಆಂಗ್ಲದಲ್ಲಿ, ಐಯಂಗಾರಿ ಬೇಕರಿಯಲ್ಲಿ ತಮಿಳಿನಲ್ಲಿ, ಅನಿವಾರ್ಯವಿದ್ದರೆ ಮಲಯಾಳಂನಲ್ಲಿ ವ್ಯವಹರಿಸುವುದು ಎಷ್ಟು ಸೂಕ್ತ? ಸುಮಾರು ಎರಡು ವರ್ಷಗಳ ಹಿಂದೆ, ಮುನ್ನಾರ್ ಗೆ ಪ್ರಯಾಣ ಹೋದ ನಾವು, ರಾತ್ರಿ ಸರವಣ ಭವನದ ಊಟ ಸವಿಯಲು ಹೋದಾಗ ಅಲ್ಲಿನ ಚಾಕರ ನಮ್ಮ ಊಟದ ಪೋಣಿಕೆಯನ್ನು ಮಲಯಾಳಂ ನಲ್ಲಿ ಬರೆದುಕೊಂಡದ್ದು ನನಗಿನ್ನೂ ನೆನಪಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಹೋಟೆಲ್ ಗೆ ಹೊದರೂ ಸೆರ್ವೆರ್ ಮೆನು ಹಿಡಿದು "ಮೇ ಐ ಹಾವ್ ಯುವರ್ ಆರ್ಡೆರ್ ಸಾರ್" ಅಂತಲೇ ಬಂದಾಗ ಎಷ್ಟು ಬೇಸರವಾಗುತ್ತದೆ ಗೊತ್ತೆ? ಪ್ರಾಯಶಃ ನಾವೆಲ್ಲರೂ ನಮ್ಮ ಒಳಿತನ್ನು ಮರೆತು ಇತರರ ಒಳಿತನ್ನು ಬಯಸುವವರಾಗಿಬಿಟ್ಟಿದ್ದೇವೆ. ಇತರರ ಒಳಿತನ್ನು ಬಯಸುವುದು ತಪ್ಪಲ್ಲ ಅದರೆ ನಮ್ಮ ಭಾಷೆಯ ಅದ:ಪಥನವನ್ನು ಆಶ್ರಯಿಸಿ ಇತರರ ಒಳಿತನ್ನು ಕಾಣುವುದು ತರವಲ್ಲ. ಮಿತ್ರರೇ, ಅಂಗಡಿಗಳಿರುವುದೇ ವ್ಯಾಪಾರಕ್ಕೆ. ಅವರು ತಮ್ಮ ಹೊಟ್ಟೆ ಪಾಡಿಗೆ, ತಮ್ಮ ಬದುಕಿಗೋಸ್ಕರ ಯಾವ ಭಾಷೆಯನ್ನು ಕಲಿಯಲೂ ಸಿದ್ಧರಿರುತ್ತಾರೆ. ಮನೆಯಲ್ಲಂತೂ ಅವರುಗಳು ಕನ್ನಡ ಮಾತಾಡುವುದಿಲ್ಲ, ಕಡೆಯ ಪಕ್ಷ ತಮ್ಮ ವ್ಯವಹಾರಗಳಲ್ಲಾದರೂ ಕನ್ನಡ ಬಳಸಲಿ. ಹಲವಾರು ಬಾರಿ ನನ್ನ ಸ್ನೇಹಿತರುಗಳನ್ನು ಈ ವಿಶಯವಾಗಿ ತಿದ್ದಲು ಮುಂದಾಗಿದ್ದೇನೆ. ನಾನು ಹೇಳುತ್ತಿದ್ದುದು ಒಂದೇ. ಹೆಚ್ಚು ಕನ್ನಡ ಬಳಸಿ. ಹಾಗೆಯೇ ಕನ್ನಡವನ್ನು ಉಳಿಸಿ. ಮೂರು ತಿಂಗಳ ಅವಧಿಯವರೆಗೆ ಅಮೇರಿಕೆಯಲ್ಲಿದ್ದಾಗ, ಅಲ್ಲಿಯ ಕನ್ನಡಿಗರ ಸಂಪರ್ಕವಿದದ್ದು ಬಹಳ ಕಡಿಮೆ. ಕಾರಣವೆಂದರೆ, ಕನ್ನಡಿಗರಿಗೆ, ಕನ್ನಡದಲ್ಲಿ ವ್ಯವಹರಿಸುವುದು ಅವಮಾನದ ಸಂಗತಿ. ಹಾಗಿದ್ದ ಸಂದರ್ಭದಲ್ಲಿ ನನ್ನ ಕಚೇರಿಯಲ್ಲೇ ಬೆಂಗಳೂರಿನ ಕೈಲಾಶ್ ಚಂದ್ರಶೇಖರ್ ಎಂಬಾತ ಪರಿಚಯವಾದ. ಕೆಲವು ದಿನಗಳು ಅವನೊಟ್ಟಿಗೆ ಕೆಲಸ ಮಾಡುವ (ದೌ)ರ್ಭಾಗ್ಯ ನನ್ನದಾಗಿತ್ತು. ಮಾತಾಡಲು ಪ್ರಾರಂಭಿಸಿದರೆ, ಹಾಳು ಆಂಗ್ಲ ಭಾಷೆಯೊಂದೇ. ಹಾಲಿನಂತಹ ನಮ್ಮ ಕನ್ನಡ ಇಲ್ಲವೇ ಇಲ್ಲ. ಬಹಳಷ್ಟು ಸಲ ನಾನು ಕನ್ನಡದಲ್ಲಿ ಅವನನ್ನು ಸಂಬೋಧಿಸಿದರೂ ಅವನಿಂದ ಬರುತಿದ್ದ ಉತ್ತರ ಆಂಗ್ಲದಲ್ಲೇ. ಅದೆಷ್ಟೋ ಬಾರಿ ನಾನು ಅವನಿಗೆ ಕನ್ನಡದಲ್ಲಿ ಮಾತನಾಡಲು ಟೀಕೆ ಮಾಡಿದರೂ ಆತ ತಿದ್ದುಕೊಳ್ಳುತ್ತಿರಲಿಲ್ಲ. ತೀರ ಗ್ರಂಥ ಕನ್ನಡದಲ್ಲಿ ಅವನಿಂದ ನಾನು ಉತ್ತರ ಅಪೇಕ್ಷಿಸುತ್ತಿರಲಿಲ್ಲ, ನಾನು ಬಯಸುತ್ತಿದ್ದುದು ಕಡೆಯ ಪಕ್ಷ ನಮ್ಮ ಬೆಂಗ್ಳೂರು ಕನ್ನಡ. ಕನ್ನಡದಲ್ಲಿ ಮಾತನಾಡುವುದು "ವೃತ್ತಿ-ಬಾಹ್ಯರು" ಎಂಬಂತೆ ವರ್ತಿಸುತ್ತಿದ್ದ ಅವನಿಗೆ ನನ್ನ ಪ್ರಶ್ನೆ "ಗುರುವೇ, ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರೂ ಅಂತಹದೇ ಕಚೇರಿಗಳಲ್ಲಿ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರಲ್ಲಾ....... ಅವರೆಲ್ಲರೂ ವೃತ್ತಿ ಬಾಹ್ಯರೇ?" ಆ ಮೂರು ತಿಂಗಳ ವನವಾಸದಿಂದ ಮರಳಿ ಬರುವ ವೇಳೆಗೆ, ಫ಼್ರಾಂಕ್ ಫ಼ರ್ಟ್ ನಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಪರಿಚಯವಾದವರೇ ಶ್ರೀ ಸತ್ಯಮಂಗಳ ಜಯತೀರ್ಥ ಜಯಸಿಂಹ ರಾವ್. ವಿಪರ್ಯಾಸವೆಂದರೆ, ಅವರು ನನ್ನ ಪಕ್ಕದಲ್ಲೇ ಕೂತಿದ್ದರೂ ಅವರ ಪರಿಚಯವಾದದ್ದು ಫ಼್ರಾಂಕ್ ಫ಼ರ್ಟ್ ನಿಂದ ೩೦೦೦ ಸಾವಿರ ಕಿಲೋಮೀಟರ್ ದಾಟಿದ ನಂತರ. ಸಂಭಾಷಣೆ ಪ್ರಾರಂಭವಾದದ್ದು ಆಂಗ್ಲದಲ್ಲೇ, "Are you a resident of Bengaluru?" ಎಂದು. ಉತ್ತರ ಬರುತ್ತಿದ್ದಂತೆಯೇ ಕನ್ನಡದಲ್ಲಿ ತಾಸುಗಟ್ಟಲೆ ಮಾತನ್ನಾರಂಭಿಸಿದೆವು. ಬಹಳ ಆತ್ಮೀಯರೂ ಆಗಿಬಿಟ್ಟರು. ಕೆಲಸದ ಬಗ್ಗೆ ಮಾತನಾಡಿದೆವು. ಜೀವನದ ಬಗ್ಗೆ ಮಾತಾಡಿದೆವು. ಅಕ್ಟೋಬರ್ ೩೧ರಂದು ಬಸವರಾಜ್ ಎಂಬ ನನ್ನೊಟ್ಟಿಗೇ ಕೆಲಸಮಾಡುವವನು, "Sir, I heard that last year you had organised Kannada Rajyotsava in the office. Will you please let me know about....."... ತಕ್ಷಣ ನಾನು ಕೇಳಿದೆ, "ಸ್ವಾಮಿ, ಕನ್ನಡದಲ್ಲಿ ಮಾತಾಡಬಹುದಾ?" ರಾಜ್ಯೋತ್ಸವ ಮಾಡುವ ಸಂದರ್ಭದಲ್ಲಿಯೂ ಕನ್ನಡ ಮಾತಡದಿದ್ದರೆ ಹ್ಯಾಗೆ ಸ್ವಾಮಿ? ನಟರತ್ನಾಕರ್ ಡಾ ಮಾಸ್ಟರ್ ಹಿರಣ್ಣಯ್ಯ ನಡುಬೀದಿ ನಾರಾಯಣ ನಾಟಕದಲ್ಲಿನ ಒಂದು ಮಾತು, "..........ನೋಡೀಮ್ಮಾ. ಆಂಧ್ರದವರು ಇದ್ದಾರಲ್ಲ ಅವರು ಸ್ವಾಭಿಮಾನಿಗಳು. ತಮಿಳಿನವರು ಇದ್ದಾರಲ್ಲ ಅವರು ದುರಾಭಿಮಾನಿಗಳು. ಮತ್ತೆ ನಮ್ಮ ಕನ್ನಡದವರು ಇದ್ದಾರಲ್ಲ ಅವರು ..........ನಿರsssssssಭಿಮಾನಿಗಳು. ಅಂಗೈ ಮೇಲೆ ಕೊಬ್ಬರಿ ಎಣ್ಣೆ ಹಾಕಿಕೊಳ್ತಾರೆ. ಒಂದು ಹನಿ ಮುಂಗೈಗೆ ಸೋರುವಷ್ಟರಲ್ಲಿ ಎಚ್ಚೆತ್ತುಕೊಂಡು, ಆ ಸೋರುವ ಚಿಕ್ಕ ಹನಿ ಎಣ್ಣೆಯನ್ನು ತಲೆಗೆ ಹಚ್ಕೊತಾರೆ. ಆ ಸಂದರ್ಭದಲ್ಲಿ ಚೆಲ್ಲಿದ ಉಳಿದ ಎಣ್ಣೆಯ ಪರಿವೇ ಇರುವುದಿಲ್ಲ. ಆ ಒಂದು ಹನಿ ಹಚ್ಕೊತಾರಲ್ಲಾ ಅದೆ ನವೆಂಬರ್ ಒಂದು- ಕನ್ನಡ ರಾಜ್ಯೋತ್ಸವ......... ಅರ್ಥವಾಯ್ತೇ" ಹೀಗೆ ಕನ್ನಡಾಭಿಮಾನ ಒಂದು ದಿನಕ್ಕುಳಿಯದೇ, ವರ್ಷಾವಧಿಯೂ ಇದ್ದರೆ ಕನ್ನಡಾಂಬೆ ಕ್ಷೇಮ. ತರಾತುರಿಯಲ್ಲಿ ಬರೆದ ಈ ಲೇಖನದಲ್ಲಿ ವ್ಯಾಕರಣ ದೋಷಗಳಿದ್ದರೆ, ಖಂಡಿತ ಅಕ್ಷಮ್ಯ ಅಪರಾಧವಾಗುತ್ತದೆ. ಟೀಕೆಯುಕ್ತ ತಪ್ಪುಗಳನ್ನು ತಿದ್ದಿರಿ.

1 comment:

Radha said...

Praveen, ninna baravanige bahala chennagide.. odi tumba khushi aitu.. neenu Kannadigara bagge heluva ella maatu noorakke nooru paalu satya.. namma bhasheya bhavishya beledu holeyali anta naanu ninnante aashisuve...prayatnisuve..