ಬರಹದಲ್ಲಿ ಎಷ್ಟು ತ್ರಾಣವಿದೆ ಎಂದು ನಂಬುವುದಕ್ಕೆ ಅಸಾಧ್ಯವಾಗುತ್ತದೆ. "ಕತ್ತಿಗಿಂತ ಲೇಖನಿ ಹರಿತವಾದುದು" ಎಂಬುದು ಮುತ್ತಜ್ಜನ ಕಾಲದ ಸಾಮತಿ. ಈ ಸಾಲುಗಳನ್ನು ಎಡ್ವರ್ಡ್ ಬುಲ್ವೆರ್ ಲೈಟನ್ ತನ್ನ ನಾಟಕವಾದ "ರಿಶೇಲೂ" ನಲ್ಲಿ ಮೊಟ್ಟಮೊದಲಿಗೆ ಬಳಸಿದನು. ಇಂದಿಗೂ ಎಲ್ಲರೂ ಯಥೆಚ್ಚವಾಗಿ ಬಳಸುತ್ತರೆ, ಈ ಸಾಲುಗಳನ್ನು. ಆರ್ಮನ್ಡ್ ರಿಶೇಲು ಹದಿನಾರನೆಯ ಶತಮಾನದ France ದೇಶದ ಪ್ರಭಾವಿ ಮಂತ್ರಿಯಾಗಿದ್ದ. ರಾಜ ಲೂಯಿ-೩ ಇವನ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ರಿಶೇಲು, ಪರಿಣಿತ ನೀತಿಶಾಸ್ತ್ರಜ್ನ್ಯ ಹಾಗು ರಾಜಕೀಯ ಮುತ್ಸದ್ದಿ. ಈತನನ್ನೇ ಆಧರಿಸಿ ಎಡ್ವರ್ಡ್ ಬುಲ್ವೆರ್ ಲೈಟನ್ ೧೯ನೇ ಶತಮಾನದಲ್ಲಿ ಲಂಡನ್ ನಗರದಲ್ಲಿ "ರಿಶೇಲೂ" ನಾಟಕವನ್ನು ತಯಾರಿಸಿದ. ಎಷ್ಟೇ ಪ್ರಭಾವಿ ಗಾದಿಯನ್ನು ಎಡ್ವರ್ಡ್ ನಮಗೆ ಕೊಟ್ಟಿದ್ದರೂ ಈತನ ಹೆಸರು "ಕೆಟ್ಟ ಬರಹ"ಗಳ ಬರಹಗಾರರ ಯಾದಿಗೆ ಸೇರಿಹೋಗಿದೆ.
ಈಗಿನ ಕಾಲಕ್ಕೂ ಕೇವಲ ಪತ್ರಿಕೋದ್ಯಮ ಹಾಗು ರಾಜಕೀಯ-ಗೂಂಡಾಗಿರಿ (ರಾಜಕೀಯ, ಗೂಂಡಾಗಿರಿ ಎರಡೂ ಒಂದೇ ಎಂದು ನೀವು ಸಾಧಿಸಲೆತ್ನಿಸಿದರೆ ನಾನು ನಿಮ್ಮನ್ನು ಸಮರ್ಥಿಸುತ್ತೇನೆ. :-) ) ನಡುವಿನ ಸಂಬಂಧಕ್ಕೆ ಬಳಸಲಾಗುತ್ತಿರುವ "ಕತ್ತಿಗಿಂತ ಲೇಖನಿ ಹರಿತವಾದುದು" ಎಂಬ ಗಾದೆಯನ್ನು ಈ ಕಾಲಕ್ಕೆ ಬದಲಿಸಿಕೊಳ್ಳಲೋಸುಗ ಈ ಲೇಖನ.
ಲೇಖನಿ ಕತ್ತಿಗಿಂತ ಹರಿತವೋ ಎನೋ ನಾನರಿಯೆ. ಆದರೆ ಲೇಖನಿಯ ಹರಿತವನ್ನು ಬಲ್ಲೆ. ಹರಿತ ಎಂದ ಕೂಡಲೆ ಯಾರನ್ನಾದರೂ ಇರಿದು ಕೊಲ್ಲುವಂತಹದ್ದು ಎಂಬುದಾಗಿ ಅಲ್ಲ. ಅದಕ್ಕೆ ಏಕಾಂಗಿಯಾಗಿ ಇರುವ ಶಕ್ತಿ ಪ್ರಾಯಶಃ ಬೇರೆ ಯಾವ ವಸ್ತುವಿಗೂ ಇಲ್ಲ. ಪುಟ್ಟ ಕಾಗದದ ಮೇಲೆ ಎನೋ ಬರೆದದ್ದು ಮತ್ಯಾರಿಗೋ ಸಿಕ್ಕಿದ ಮೇಲೆ ಅದು "ಕಹಳೆ ಬಾಯಿಗೆ ಮುತ್ತಿಟ್ಟಂತೆ" ನೀವು ಕೇಳಬಹುದು- ಬರೆಯದೇಯೇ ಕೇವಲ ಆಡಿದ ಮಾತು ಸಹ ಎಷ್ಟಾದರೂ ಎಲ್ಲರಿಗೂ ಹರಡುತ್ತದೆ. ಆದರೆ ಮಾತು ಗಾಳಿಮಾತೂ ಆಗಿರಬಹುದು. ಅದಕ್ಕೆ ಸಮಂಜಸ ದಾಖಲಾತಿಯಾಗಲಿ, ಪುರಾವೆಯಾಗಲಿ ಇರುವುದಿಲ್ಲ. ಸಾಕ್ಷಿ ಇಲ್ಲದ್ದನ್ನು ಜನ ಅಷ್ಟು ಸುಲಭವಾಗಿ ನಂಬುವುದಿಲ್ಲ.
ಅಮೇರಿಕೆಯಲ್ಲಿ ಎರಡನೆಯ ಬಾರಿಗೆ ಬಂದಿರುವ ನಾನು, ಇತ್ತೇಚೆಗೆ ಒಂದು ಹೊಸ ವಿಷಯ ಅರಿತುಕೊಂಡೆ. ಕೆಲಸದ ಮೇರೆಗೆ ಒಬ್ಬನ ಕೋಣೆಗೆ ಹೋಗಬೇಕಿತ್ತು. ಮೂರ್ನಾಲ್ಕು ಬಾರಿ ಹೋಗಿ ಬಂದರೂ ಆತ ನನಗೆ ಸಿಗಲೇ ಇಲ್ಲ. ಕಡೆಗಂತೂ ಆತನೇ ನನ್ನ ಕೋಣೆಗೆ ಬಂದ. ಅವನನ್ನು ನೋಡಿದಾಕ್ಷಣ ನಾನು ಸಾಮಾನ್ಯವಾಗಿಯೇ "ನಿಮ್ಮ ಕೋಣೆಗೆ ಬಂದಿದ್ದೆ. ನೀವು ಇರಲಿಲ್ಲ" ಎಂದೆ. ಅದಕ್ಕೆ ಆತ ನನ್ನ ಮಾತನ್ನು ಅಷ್ಟಾಗಿ ನಂಬದೇ "......ಬಂದಿದ್ದೆ ಎಂದು ಎನಾದರು ಪುರಾವೆ ಇದೆಯಾ?.....ಮುಂದಿನ ಸರಿ ನೀನು ಬಂದಾಗ ನಾನಿರಲಿಲ್ಲ ಎಂದರೆ ಇಲ್ಲವಾದರೆ ಒಂದು ಈ-ಮೇಲ್ ಮಾಡಿಬಿಡು. ಆಗ ನಾನು ಎಲ್ಲಿದ್ದರೂ ನೀ ಬಂದಿದ್ದ ವಿಷಯ ತಿಳಿಯುತ್ತದೆ" ಎಂದನು. ಆಗಷ್ಟೆ ನನಗೆ ಅರ್ಥವಾಯ್ತು ಬರಹದ ಪುರಾವೆ.
ಕೇವಲ ಪುರಾವೆಯೊಂದೇ ಮುಖ್ಯ ಕಾರಣವಲ್ಲ ಬರಹಕ್ಕೆ. ಒಂದು ಕಾಲದಲ್ಲಿ ಕಾಗದ ಬರೆಯುವ ಸಂಪ್ರದಾಯ ಕೇವಲ ಸಂಬಂಧಿತರಿಗೆ ಅಥವಾ ಕಛೇರಿ ಅರ್ಜಿ ಇಷ್ಟಕ್ಕೆ ಸೀಮಿತವಾಗಿತ್ತು. ಸಂಪ್ರದಾಯ ಬೆಳೆದದ್ದರಿಂದ ಕಾಗದ ಸ್ನೇಹಿತರನ್ನು ತಲುಪುತ್ತಿತ್ತು. ಕೆಲವು ವರ್ಷಗಳ ನಂತರ ಪ್ರೇಮ ಪತ್ರದ ಗೀಳು ಪ್ರಾರಂಭವಾಯ್ತು. ವಯಸ್ಸಿಗೆ ಬಂದ ಎಲ್ಲರೂ ನಲ್ಮೆಗೊಂದು ಪ್ರೇಮ ಪತ್ರ ಬರೆಯಲಾರಂಭಿಸಿದರು. ಅವರೇ ಬರೆದರೋ, ಬೇರೆಯವರಿಂದ ಬರೆಸಿದರೋ ಅದು ಸೆಕಂಡರಿ. ಒಟ್ಟಿನಲ್ಲಿ ಬರೆದರು ಬರೆಸಿದರು. ಇದರಿಂದಾಗಿ ಹುಡುಗಿಯರನ್ನು ಬೇಳಿಸಿಕೊಂಡರು. Expressive ಅಲ್ಲದ ಹುಡುಗರು/ಹುಡುಗಿಯರು ಮಾತಿನಲ್ಲಿ ಪ್ರೀತಿ-ಪ್ರೇಮ ವರ್ಣಿಸಲಾಗದೆ ಸೋತು ಕಾಗದ-ಲೇಖನಿಯ ಮೊರೆ ಹೋದರು. "ನಿನ್ನ ರೂಪ, ನಿನ್ನ ವ್ಯಕ್ತಿತ್ವ, ಎಲ್ಲವೂ ನಿನ್ನನ್ನು ಮೋಹಿಸುವಂತೆ ಮಾಡಿದೆ. ನೀನು ನಕ್ಕರೆ ಕೆನ್ನೆಯಲ್ಲಿ ಬೇಳುವ ಗುಳಿ, ಆಗಾಗ ನಿನ್ನ ಕೆದರಿದ ಹೆರಳನ್ನು ನಿನ್ನ ಕಿರುಬೆರಳಿನಿಂದ ಕಿವಿಗೆ ಸಿಕ್ಕಿಸುವ ಪರಿ ಎಲ್ಲವೂ ನನಗೆ ಬಹಳ ಇಷ್ಟ. ಕೆಲವೊಮ್ಮೆ ಹಣೆಯ ಮೇಲೆ ನೀನಿಡುವ ಪುಟ್ಟ ಗುಂಡಗಿನ ಕುಂಕುಮ ನಿನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ....." ಎಂದೆಲ್ಲ ಹುಡುಗರು ಬರೆದರೆ, ಪತ್ರಕ್ಕೆ ಪ್ರತ್ಯುತ್ತರವಾಗಿ, "ನಿಮ್ಮ ಮೈಕಟ್ಟು, ನಿಮ್ಮ Shirt ಕಲರ್ Selection ಪರಿ, ತುಟಿಯಕೆಳಗೆ ನೀವೇ ಮೂಡಿಸಿಕೊಂಡಿರುವ ಚಿಕ್ಕದಾದ ಗಡ್ಡ ನನಗೆ ತುಂಬಾ ತುಂಬಾ ಇಷ್ಟ.... Glasses ನಿಂದ Contacts ಗೆ ಬದಲಿಸಿದ್ದು ಚೆನ್ನಾಗಿಲ್ಲ. ಪ್ಲೀಸ್ ಒಂದು ಪ್ಲೇನ್ ಗ್ಲಾಸ್ ಆದರೂ ಹಾಕಿಕೊಳ್ಳಿ..ಪ್ಲೀಸ್" ಎಂದಾಗಿ ಎಲ್ಲಾ ಕಾಗದದಲ್ಲಿ ವಾರ್ತಾಲಾಪ ನಡೆಯುತ್ತಿತ್ತು.
ಕಾಲ ಜರುಗಿತು. ಕಾಗದಕ್ಕೂ ಮಂಕು ಕವಿದಿತು. ಹಾಳೆಯ ಮೇಲೆ ಬರಬೇಕಿದ್ದ ಲೇಖನಿಯ ಗುರುತು, ಬರವಣಿಗೆ ವಿದ್ಯುನ್ಮಾನ ಅಂಚೆಗೆ ಬದಲಾವಣೆಯಾಯಿತು, ಮುದ್ದಾದ ಹಸ್ತಾಕ್ಷರ Digital Signature ಆಯ್ತು. ಲೇಖನಿ ಕೀಲಿಮಣೆಗೆ ಬದಲಿದರು ಅದೇ ಭಾವ ಹೊಮ್ಮಿಸುತ್ತಿತ್ತು. ಕೈಬರಹದಲ್ಲಿ ತರಬಹುದಾದ ಪ್ರೀತಿ, ಅಕ್ಕರೆ ವಿ-ಅಂಚೆಯಿಂದ ಸಾಧ್ಯವಾಗುತ್ತಿರಲಿಲ್ಲವಾದರೂ ಅಂತರಜಾಲದ ಮುಖೇನ ಸಾಕಷ್ಟು ವ್ಯವಹಾರ ನಡೆಸಿತು ನಮ್ಮ ವಿ-ಅಂಚೆ. ವಿ-ಅಂಚೆ ಪ್ರಾರಂಭವಾದ ಹೊಸತರಲ್ಲಿ, ಒಂದು ಅಂಚೆ ಕಳುಹಿಸಿ, ಸ್ವಲ್ಪ ಹೊತ್ತಿನ ನಂತರ ಕಳುಹಿಸಿದವನು ಎದುರಾದಾಗ, ಅವನಿಗೆ ಹೇಳುತ್ತಿದ್ದೆವು. ಅವನೂ ಅದಕ್ಕೆ ಪ್ರತ್ಯುತ್ತರ ನೀಡಿ ದೂರವಾಣಿ ಮೂಲಕ ತಾನೂ ಉತ್ತರಿಸಿದ್ದೇನೆಂದು ತಿಳಿಸುತ್ತಿದ್ದ. ಎಂಜಿನಿಯರಿಂಗ್ ತರಗತಿಗಳಲ್ಲಿಯೂ ಕಾಲಾಹರಣ ಮಾಡಲೋಸುಗ ಹಿಂದಿನ ಮೇಜಿಗೋ ಪಕ್ಕದ ಮೇಜಿಗೋ ಪ್ರಸಾದ್, ರಾಜಿ, ಸೌಮ್ಯ, ನಿತಿನ್, ಸೀನಾ,ರಶ್ಮಿ, ಶಿಲ್ಪಾ ಇವರೊಟ್ಟಿಗೆಲ್ಲ ಕಾಗದ ಒಬ್ಬರಿಂದ ಒಬ್ಬರಿಗೆ ಪಾಸ್ ಮಾಡುವ ಮೂಲಕ ಮಾತಾಡುತ್ತಿದ್ದೆವು. ನಮ್ಮ ಅದೃಷ್ಟಕ್ಕೆ ಎಂದೂ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಆ ಮುಖೇನ ನಡೆಯುತ್ತಿದ್ದ ಸಂಭಾಷಣೆ ಪ್ರಾಯಶಃ ಮುಖಾಮುಖಿ ಸಂಭಾಷಣೆಕಿಂತ ಎಷ್ಟೋ ಮುದ ನೀಡುತ್ತಿತ್ತು. ಈಗಲೂ ನನ್ನಲ್ಲಿ ಆ ಪುಟ್ಟ ಪುಟ್ಟ ಚೇಟಿಗಳು ಆ ಬರಹಗಳು ಎಲ್ಲವೂ ಇದೆ. ಮತ್ತೂ ಕಾಲ ಜರುಗಿತು. ಇದು, ಕೀಲಿಮಣೆ ಕೀಲಿಪಟ ಆದ ಸುವರ್ಣ ಯುಗ. ಹದಿಹರೆಯರೆಲ್ಲರಲ್ಲಿಯೂ ಒಂದು ಮೊಬೈಲ್. ಅಪ್ಪನ ದುಡ್ಡಿನ ಶಕ್ತ್ಯಾನುಸಾರ ತರಹ ತರಹದ ಮೊಬೈಲ್. ಆ ಮೊಬೈಲ್ ಒಳಗೆ ದಿನಕ್ಕೆ ಸುಮಾರು ೧೦೦ ಅಥವಾ ಕೇವಲ ೧೦೦ರೇ ಎಸ್.ಎಂ.ಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದ ಸಿಮ್ ಗಳು. ಇಂದಿಗೂ, ಎಂದಿಗೂ ಉಳಿದುಕೊಳ್ಳುವ ಎಸ್.ಎಂ.ಎಸ್ ಪದ್ಧತಿ ಪ್ರಾಯಶಃ ಇದರ ಗುಂಗಿನಲ್ಲೇ ಉಳಿದವರಿಗೆ ಅದರ ಮಹತ್ವ ಕೇಳಬಹುದು. ಬೆಳಿಗ್ಗೆ "ಶುಭ ಮುಂಜಾನೆ"ಯಿಂದ ಶುರುವಾಗುವ ಸಂದೇಶಗಳು, ರಾತ್ರಿಯ "ಶುಭ ರಾತ್ರಿ"ಯ ವರೆಗೂ ಸಾವಿರಾರು ಸಂದೇಷಗಳು..... ರಾತ್ರಿ ಹತ್ತು ಗಂಟೆಯಿಂದ ಹನ್ನಂದು ಗಂಟೆಯವರೆಗೂ ದೂರವಾಣಿಯ ಮೂಲಕ ಮಾತಾಡಿಯಾದರೂ, ಹನ್ನಂದು ಗಂಟೆ ಒಂದು ನಿಮಿಷಕ್ಕೆ ಕಳಿಸುವ "gud nite chweet dreamz take care.... missss u" ಸಂದೇಷ ಎಷ್ಟೊ ಬಾರಿ ಆನಂದ ತರುತ್ತದೆ. ನನ್ನನ್ನು ಯಾರೂ ಇವನಷ್ಟು ಚೆನ್ನಾಗೆ ಕಾಳಜಿ ಮಾಡುವವನೇ ಇಲ್ಲ ಎಂದೆಲ್ಲಾ ಅನಿಸುವಂತೆ ಮಾಡುತ್ತದೆ. ಇದು ಕೇವಲ ಪ್ರೇಮಿಗಳು ಕಳಿಸುವ ಸಂದೇಷವಲ್ಲ. ಒಬ್ಬರನ್ನು ಇಷ್ಟ ಪಡುವ, ಆದರಿಸುವ, ಪ್ರೀತಿಸುವ, ನಿಜವಾಗಿಯೂ ಅವನ/ಅವಳ ಅಗಲಿಕೆಯನ್ನು ಹಳಿಯುವ ಯುವ ಸ್ನೇಹಿತರ ಸಂದೇಷಗಳು. ಎಷ್ಟೋ ಬಾರಿ ಗಮನಿಸಿದ್ದೇನೆ. ಇನ್ಬಾಕ್ಸ್ ನಲ್ಲಿ forward sms ಕ್ಕಿಂತ ಹೆಚ್ಚಾಗಿ ಸ್ನೇಹಿತರು ಕಳಿಸುವ "take care misss u" ಸಂದೇಷಗಳೆ ಇರುತ್ತವೆ. ಕೀಲಿಪಟದ ಈ ಬರಹವೂ ಮನಸ್ಸಿಗೆ ಸಮಾಧಾನ, ಮುದ, ಆನಂದ, ಉಲ್ಲಸ, ಹರ್ಷ ತರುವುದರಲ್ಲಿ ಸಂಶಯವೇ ಇಲ್ಲ.
No comments:
Post a Comment